Thursday, May 20, 2010

ಬದುಕು ಎಂಬ ವಿರೋಧಾಭಾಸಗಳ ಸಂತೆ


ಇಂದು ಬೆಳಿಗಿನ ಜಾವ ಬಾಗಿಲು ತೆರೆದು ನೋಡಿದಾಗ ಹೊರಗಡೆ ಕೋಮಲ ವಾತಾವರಣ ಮೂಡಿತ್ತು. ಮನಸ್ಸು ಒಮ್ಮೆಗೇ ಅರಳಿಕೊಂಡಿತು. ನಿನ್ನೆ ರಾತ್ರಿ ಬಿದ್ದ ಮಳೆಯಿಂದ ಭೂಮಿ ತಂಪಾಗಿತ್ತು. ಮೋಡ ಕವಿದು ಮಂಜು ಮುಸುಕಿದಂತಹ ದೃಶ್ಯ, ಹಿತವಾದ ತಂಗಾಳಿಯಿಂದಾಗಿ ಮೋಹಕ ವಾತಾವರಣ ಸೃಷ್ಟಿಯಾಗಿತ್ತು. ಒಟ್ಟಾರೆ ಇಂದು ನಮ್ಮ ಹಾಸನ ತನ್ನ ಇನ್ನೊಂದು ಹೆಸರಿಗೆ ತಕ್ಕಂತೆ 'ಬಡವರ ಊಟಿ’ ಆಗಿತ್ತು.

ನನಗಾಗುತ್ತಿದ ಖುಷಿಯನ್ನು ಇತರ ಊರುಗಳಲ್ಲಿರುವ ನನ್ನ ಸ್ನೇಹಿತರೊಂದಿಗೆ SMS ಮೂಲಕ ಹಂಚಿಕೊಂಡೆ. ವಾತಾವರಣದ ವರ್ಣನೆ, ಮನಸ್ಸಿನ ಪ್ರಫುಲ್ಲತೆ...ಇದೆಲ್ಲಾ SMSಗಳಲ್ಲಿ ಹರಿದಾಡುತ್ತಿದ್ದಾಗಲೆ ಇಂದಿನ ದಿನಪತ್ರಿಕೆ ನನ್ನ ಕೈ ಸೇರಿ ಅದರ ಮುಖಪುಟ ಸುದ್ದಿ ಕಣ್ಣಿಗೆ ಬಿತ್ತು. 'ಕಾಳಿಯಾದ ಮಳೆಗಾಳಿ, ರಾಜ್ಯಾದ್ಯಂತ 4 ಜನರ ಬಲಿ... ಲಕ್ಷಾಂತರ ರೂ ಸ್ವತ್ತು ಹಾನಿ’. ಒಮ್ಮೆಗೇ ಮನಸ್ಸಿನ ಪ್ರಶಾಂತ ಕೊಳದಲ್ಲಿ ಒಂದು ಸಣ್ಣ ಕಲ್ಲು ಬಿದ್ದಂತಾಯಿತು. ಮಳೆ ಇಲ್ಲಿ ಮೋಹಕ ವಾತಾವರಣ ಸೃಷ್ಟಿಸಿದ್ದರೆ ಅದೇ ಮಳೆ ಬೇರೆ ಕಡೆ ರೌದ್ರವತಾರ ತಾಳಿದೆ. ನಾನು ಇಲ್ಲಿ ಮಳೆ ನೀಡಿರುವ ತಂಪು ತಂಗಾಳಿಯನ್ನು ಅನುಭವಿಸುತ್ತಿದ್ದರೆ, ಅದೇ ಮಳೆಯಿಂದಾಗಿ ಬೇರೆ ಕಡೆ ಜನರ ಬದುಕು ದುರ್ಭರವಾಗಿದೆ. ಇಂತಹ ವಿರೋಧಾಭಾಸದ ಸಂದರ್ಭದಲ್ಲಿ ನಾನು ಸುಖಿಸುವುದು ಸರಿಯಾ? ಅಥವ ಜೀವನನೇ ಹೀಗಾ? ಈ ಪ್ರಶ್ನೆಯನ್ನು ಗೆಳೆಯರ ಮುಂದಿಟ್ಟೆ. 'ಜೀವನವೇ ಹೀಗೆ... ಒಬ್ಬರ ಇಷ್ಟ, ಇನ್ನೊಬ್ಬರ ಕಷ್ಟ....enjoy!' ಎಂದರು ನನ್ನ ಗೆಳೆಯ ಉದಯ್.

ಕಳೆದ ವರ್ಷವೂ ಸರಿಸುಮಾರು ಇಂತಹದೇ ಸ್ಥಿತಿ ಉಂಟಾಗಿತ್ತು. ನಾನು ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಹಬ್ಬದ ವಾತಾವರಣ. ಅದೇ ವೇಳೆಯಲ್ಲಿ ಉತ್ತರ ಕರ್ನಾಟಕದಲ್ಲಿ ನೆರೆಯ ಅರ್ಭಟದಿಂದ ಸಾವಿರಾರು ಮಂದಿ ಸಂತ್ರಸ್ತರಾದರು. ಸಹಜವಾಗಿ ಪತ್ರಿಕೆಗಳ ಮುಖಪುಟಗಳಲ್ಲಿ ನೆರೆ ಹಾವಾಳಿಯೇ ಆವರಿಸಿಕೊಂಡಿತ್ತು. ಆ ಹಬ್ಬದ ವಾತಾವರಣದಲ್ಲಿ ಪತ್ರಿಕೆಯನ್ನು ಕೈಗೆತ್ತಿಕೊಂಡರೆ ಅರೆ ಕ್ಷಣ ಪಾಪಪ್ರಙ್ಞೆ ಕಾಡುತಿತ್ತು. ಪಲಾಯನವಾದಿಯಂತೆ ಅಲ್ಲಿದ್ದಷ್ಟು ದಿನ ಪತ್ರಿಕೆಗಳ ಬಳಿ ಸುಳಿಯಲಿಲ್ಲ! ಆಗ ಪತ್ರಿಕೆಯೊಂದರ ಒಳಪುಟದಲ್ಲಿ ಒಂದು ಚಿತ್ರ ಪ್ರಕಟವಾಗಿತ್ತು. ನೆರೆಗೆ ಸಂಬಂಧಿಸಿದ್ದೇ, ಆದರೆ ಪರೋಕ್ಷವಾಗಿ. ಇಲ್ಲಿಯ ಮಹಾಮಾರಿ ಮಳೆಯಿಂದಾಗಿ ಆಂಧ್ರಪ್ರದೇಶದ ಒಂದು ಜಲಾಶಯ ತುಂಬಿತ್ತು. ಒಳಹರಿವು ಹೆಚ್ಚಿದ್ದರಿಂದ ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಿ ಬಂದಿತ್ತು. ಎಷ್ಟೋ ವರ್ಷಗಳ ನಂತರ ಆ ಸಂದರ್ಭ ಬಂದಿತ್ತು. ಹಾಗಾಗಿ ಅದನ್ನು ವೀಕ್ಷಿಸಲು ಅಲ್ಲಿಯ ಒಂದು ಸೇತುವೆ ಮೇಲೆ ಜನಸಾಗರವೇ ನೆರೆದಿತ್ತು. ಇರುವೆಗೂ ಸಹ ಜಾಗವಿರಲಿಲ್ಲ! ಆ ಜನ ಸಾಗರದ ಫೋಟೊ ಅದಾಗಿತ್ತು.

ಮುಖಪುಟದಲ್ಲಿ ಮಳೆಯಿಂದ ಕೊಚ್ಚಿಹೋದ ಬದುಕುಗಳ ಚಿತ್ರಗಳು, ಒಳಪುಟದಲ್ಲಿ ಅದೇ ಮಳೆಯ ಕಾರಣಾದಿಂದ ಉಂಟಾದ ರುದ್ರರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳುತ್ತಿರುವ ಜನಸಾಗರದ ಚಿತ್ರ! ಮಾನವ ಬದುಕು ಎಂತಹ ವಿರೋಧಭಾಸಗಳ ಕಂತೆಯಲ್ಲವೇ?!

******************************

ನಾನು ಕೆಲಸಕ್ಕೆ ಸೇರುವ ಮುಂಚೆ ನಮ್ಮ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರಿದ್ದರು. ಕಛೇರಿಗೆ ಪ್ರತಿದಿನ ಒಂದು ಗಂಟೆ ಮುಂಚಿತವಾಗಿ ಬಂದು ಪತ್ರಿಕೆ ಓದುತ್ತಿದ್ದರು. ಒಮ್ಮೆ ನನ್ನ ಸಹಪಾಟಿಯೊಬ್ಬರು ಬಂದು ನೋಡಿದಾಗ ಆ ಹಿರಿಯ ಅಧಿಕಾರಿ ತಲೆ ಮೇಲೆ ಕೈ ಹೊತ್ತು ಚಿಂತಾಕ್ರಾಂತರಾಗಿ ಕುಳಿತ್ತಿದ್ದರಂತೆ. ಸಹಪಾಟಿಗೆ ಗಾಬರಿಯಾಗಿ ಏನಾಯಿತು ಎಂದು ವಿಚಾರಿಸಿದಾಗ, ಆಗ ಸೂರತ್ ನಲ್ಲಿ ಪ್ಲೇಗ್ ನಿಂದಾಗಿ ಒಂದಿಷ್ಟು ಮಂದಿ ಸತ್ತಿದ್ದ ಸುದ್ದಿ ಅವರ ಚಿಂತೆಗೆ ಕಾರಣಾವಾಗಿತ್ತು! ಎಲ್ಲಿಯೇ ಅವಘಡವಾಗಲಿ ಅಂದು ಅವರು ಬೇಸರದಲ್ಲಿ ಇರುತ್ತಿದ್ದರಂತೆ. ಅಲ್ಲಿ ನಾಟಕೀಯತೆ ಆಗಲಿ ತೋರಿಕೆ ಆಗಲಿ ಇರುತ್ತಿರಲಿಲ್ಲ!

****************************

ಈ ಜೀವನ, ಈ ಬದುಕು ಯಾರ ಅಗಲಿಕೆಯಿಂದಾಗಲಿ ಅಥವ ಬರುವಿಕೆಯಿಂದಾಗಲಿ ತನ್ನ ಲಯವನ್ನು ಕಳೆದುಕೊಳ್ಳುವುದಿಲ್ಲ. ಅದು ಸಾಗುತ್ತಲೇ ಇರುತ್ತದೆ. ಸಾಗುತ್ತಲೇ ಇರಬೇಕು. ಎಲ್ಲೋ ಓದಿದ ನೆನಪು. ಒಬ್ಬ ಪಾಶ್ಚಾತ್ಯ ತತ್ವಙ್ಞಾನಿ ತನ್ನ ಕೊನೇ ಗಳಿಗೆಯಲ್ಲಿ ಹೇಳಿದ್ದು " ನನ್ನ ಇಷ್ಟು ವರ್ಷದ ಜಿವಾನುಭವದಿಂದು ಇದುವರೆಗು ನಾನು ಕಲೆತದ್ದು ಮೂರು ಪದದ ಒಂದೇ ಒಂದು ವಾಕ್ಯ 'LIFE GOES ON' "

ಚಿತ್ರ: ಎ ಜೆ ಜೆ




2 comments:

  1. ತು೦ಬಾ ಚೆನ್ನಾಗಿ ಬರೆದಿದ್ದೀರಿ.
    ನಿನ್ನೆಯ ವಿಮಾನ ಆಫಘಾತದ ಸುದ್ದಿ ಓದಿ ತು೦ಬಾ ಬೇಜಾರಾಗಿದೆ.ತನ್ನ ಅಜ್ಜಿಯ ಶವ ನೋಡೋಕೆ ಅ೦ತ ಬ೦ದವನು, ತಾನೆ ಶವವಾದ. ಅಪ್ಪನ surprise gift ಗೆ ಕಾದು ಕೂತ ಮಗಳು ಆತನನ್ನೆ ಕಳ್ಕೊ೦ಡ್ಳು. ೨೫ ವರ್ಷ ಅಲ್ಲಿ ಕೆಲಸ ಮಾಡಿ ಇಲ್ಲಿ ಬ೦ದು settle ಆಗೋಣ ಅ೦ದುಕೊ೦ಡು ಬ೦ದವನು ತನ್ನ ಮನೆ ತಲುಪಲಿಲ್ಲ...!! ಎ೦ಥಾ ವಿಪರ್ಯಾಸ !!! ಬದುಕು ಅ೦ದರೆ ಇಷ್ಟೆನಾ..??

    ReplyDelete
  2. ಜೀವನವೇ ಇಷ್ಟು. ತಾನೊಂದು ಬಗೆದರೆ ದೈವವೊಂದು ಬಗೆವುದು.
    ಮಾನವ ಪ್ರಕೃತಿಯ ವಿರುದ್ಧ ಹೋದಷ್ಟು ಪ್ರಕೃತಿ ಇನ್ನೊಂದು ರೀತಿಯಲ್ಲಿ ತನ್ನ ಪ್ರತಾಪ ತೋರಿಸಿದೆ...!!

    ReplyDelete